‘’ಹದಿಹರೆಯದ ವರ್ತನೆಗಳು’’ ವಿಶೇಷ ಉಪನ್ಯಾಸ

ವಿದ್ಯಾಗಿರಿ: ಆಕರ್ಷಣೆಯೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಇರುವ ಸಹಜಗುಣ. ಆದರೆ ಅದನ್ನು ನಿಗ್ರಹಿಸಿಕೊಳ್ಳುವ ಸಾಮಥ್ರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಕಾಲೇಜಿನ ಮಹಿಳಾ ಕ್ಷೇಮಪಾಲನಾಧಿಕಾರಿ ಡಾ.ಮಧುಮಾಲಾ ಕೆ. ತಿಳಿಸಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ “ಹದಿಹರೆಯದ ವರ್ತನೆಗಳು” ಎಂಬ ವಿಷಯದ ಕುರಿತು ವಿದ್ಯಾರ್ಥಿಯರನ್ನುದ್ದೇಶಿಸಿ ಮಾತನಾಡಿದರು.

ಹದಿಹರೆಯದ ಸಮಯದಲ್ಲಿ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾಗ ತೊಡಗುತ್ತಾರೆ. ದೇಹದಲ್ಲಾಗುವ ಶಾರೀರಿಕ ಬದಲಾವಣೆಗಳಿಗೆ ಮಕ್ಕಳು ಹೇಗೆ ವರ್ತಿಸಿ, ಎಚ್ಚರದಿಂದಿರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಂಡರು.

ಪ್ರತಿಯೊಬ್ಬ ಮಕ್ಕಳಲ್ಲಿ ಬುದ್ದಿಮತ್ತೆಯ ಪ್ರಮಾಣವು ಭಿನ್ನವಾಗಿರುತ್ತದೆ. ಬುದ್ದಿವಂತ ಹಾಗೂ ಮಂದಬುದ್ದಿಯವನೆಂದು ಅಳೆಯುವುದರಿಂದ ಮಕ್ಕಳು ನಿರಾಶಿತರಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇಂದು ಹೆಣ್ಣುಮಕ್ಕಳು ಅತೀ ಬೇಗನೆ ಋತುಮತಿಯಾಗುತ್ತಿರುವುದನ್ನು ನಾವು ಸಾಮಾನ್ಯವಾಗಿ ಗಮನಿಸುತ್ತಿದ್ದೆವೆ. ಆದರಿಂದ ಆಕೆ ಚಿಕ್ಕ ವಯಸ್ಸಿನಲ್ಲೆ ಪಡಬಾರದ ಕಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಬದಲಾದ ಆಹಾರ ಪದ್ದತಿ, ಹವಾಮಾನ ಮಾತ್ರವಲ್ಲದೆ ಮಾಧ್ಯಮದ ಪ್ರಭಾವವೂ ಒಳಗೊಂಡಿದೆ. ಈ ಎಲ್ಲಾ ವಿಷಯಗಳೂ ಹಾರ್ಮೋನ್ ಬದಲಾವಣೆಗೆ ಎಡೆಮಾಡಿಕೊಡುತ್ತವೆ. ಆದ್ದರಿಂದ ಮಕ್ಕಳು ಆರೋಗ್ಯಯುತ ಆಹಾರ ಸೇವಿಸುವುದು ಅತ್ಯಗತ್ಯ ಎಂದರು.

ವ್ಯಸನ ಎಂಬುವುದು ಯುವಜನರನ್ನು ಕಾಡುವ ಬಹುಮುಖ್ಯ ಪಿಡುಗು. ಮುಖ್ಯವಾಗಿ ಇಂದಿನ ಮಕ್ಕಳು ಮೊಬೈಲ್ ಫೋನ್‍ಗಳ ವ್ಯಸನಿಗಳಾಗಿದ್ದಾರೆ. ಅಂಕಿ ಅಂಶದ ಪ್ರಕಾರ ಇತ್ತೀಚಿನ ವರ್ಷದಲ್ಲಿ ಸುಮಾರು ಮೂವತ್ತು ಸಾವಿರ ಜನರು ಇಯರ್ ಫೋನ್ ಬಳಕೆಯಿಂದಾಗಿ ಶ್ರವ್ಯ ಶಕ್ತಿ ಕಳೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ವಹಿಸಿಕೊಂಡಿದ್ದರು. ಕಲಾ ವಿಭಾಗದ ಮುಖ್ಯಸ್ಥ ಪ್ರೋ.ವೇಣುಗೋಪಾಲ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ರೂಪಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಿಯಾಂಕ ಕಾರ್ಯಕ್ರಮವನ್ನು ನಿರೂಪಿಸಿ, ಭಾವನಾ ಸ್ವಾಗತಿಸಿ, ಸುಪ್ರಿಯಾ ವಂದಿಸಿದರು.

Highslide for Wordpress Plugin